ಲೋಕ್ ಅದಾಲತ್ ನಿಂದ ಒಂದಾದ ಜೋಡಿ

ದೊಡ್ಡಬಳ್ಳಾಪುರ:ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿಂದು ರಾಷ್ಟ್ರೀಯ ಲೋಕ ಆದಾಲತ್‌ ನಡೆಯಿತು.

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ದೂರವಾಗಿದ್ದ ಗಂಡ-ಹೆಂಡತಿಯನ್ನು ರಾಜೀ ಸಂಧಾನದ ಮೂಲಕ ದೊಡ್ಡಬಳ್ಳಾಪುರ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ಅವರು ಒಂದು ಮಾಡಿದರು.

ದೊಡ್ಡಬಳ್ಳಾಪುರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ನಡೆಯುತ್ತಿದ್ದ ಕೌಟುಂಬಿಕ ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ದಾಂಪತ್ಯ ಜೀವನದಲ್ಲಿ ಬಿರುಕುಗೊಂಡು ದೂರವಾಗಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಯಿತು.

ಇಬ್ಬರ ಮನಸ್ಸುನ್ನು ಬದಲಾಯಿಸಿ ನೂತನ ಜೀವನಕ್ಕೆ ಕಾಲಿಡುವಂತೆ ನ್ಯಾಯಾಧೀಶರು ಮನಮೋಲಿಸಿದರು. ನವ ವಧು- ವರರಂತೆ ಪರಸ್ಪರ ಹೂಮಾಲೆಗಳನ್ನು ಹಾಕಿಕೊಳ್ಳುವ ಮೂಲಕ ಸತಿ-ಪತಿ ಒಂದಾದರು.

ಒಂದಾದ ಜೋಡಿಗಳಿಗೆ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ ಘಟನೆ ಕೋರ್ಟ್ ಆವರಣದಲ್ಲಿ ನಡೆದಿದೆ.

ಶಾಲಿನಿ – ಹರೀಶ್, ಸುರೇಶ್ – ಮೀನಾಕ್ಷಿ ಜೋಡಿಯು ದೊಡ್ಡಬಳ್ಳಾಪುರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಇದೀಗ ರಾಷ್ಟ್ರೀಯ ಲೋಕ ಆದಾಲತ್‌ ನಲ್ಲಿ ರಾಜೀ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ. ಈ ಜೋಡಿ ಪುನಃ ತಮ್ಮ ದಾಂಪತ್ಯ ಜೀವನಕ್ಕೆ ಮರಳಿದ್ದಾರೆ.

ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ವಿಚ್ಛೇದನ ಪಡೆಯುವ ಸಂಖ್ಯೆಯೂ ಅಧಿಕವಾಗುತ್ತಿರುವುದು ಬೇಸರದ ಸಂಗತಿ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಶಾಂತಿ ಸುವ್ಯವಸ್ಥೆ ಅತ್ಯವಶ್ಯಕ ಎಂದರು.

ಸಣ್ಣ ಪುಟ್ಟ ವ್ಯಾಜ್ಯಗಳಿಂದ ಮನಸ್ಸುಗಳನ್ನು ಕೆಡಿಸಿಕೊಳ್ಳುವ ಬದಲು ಎಲ್ಲರೂ ಹೊಂದಾಣಿಕೆಯ ಜೀವನ ನಡೆಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ. ವಿಚ್ಛೇದನಕ್ಕೆ ಮುಂದಾಗಿರುವ ದಂಪತಿಗಳಿಗೆ ಈ ಪ್ರಕರಣ ಒಂದು ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಇಂದು ನಡೆದ ಲೋಕ ಅದಾಲತ್ ನಲ್ಲಿ ಸುಮಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ‌. ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರೀಯ ಲೋಕ ಆದಾಲತ್‌ ಹಮ್ಮಿಕೊಳ್ಳಲಾಗುತ್ತದೆ. ಈ‌ ಕುರಿತು ಎಲ್ಲರಿಗೂ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು…

ಲೋಕ ಅದಾಲತ್ ನಿಂದ ನಾವು(ಗಂಡ-ಹೆಂಡತಿ) ಒಂದಾಗಿದ್ದೇವೆ. ಮುಂದೆ ಯಾವುದೇ ಮನಸ್ತಾಪಗಳು‌ ಇಲ್ಲದೇ ಸಂಸಾರ ನಡೆಸುಕೊಂಡು ಹೋಗುತ್ತೇವೆ‌. ನಮಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಂಡು, ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತೇವೆ. ನಮ್ಮನ್ನು ಮತ್ತೆ ಒಂದು‌ ಮಾಡಿದ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ಹಾಗೂ ವಕೀಲರಾದ ಎಂ.ಮೋಹನ್ ಕುಮಾರ್, ಎಂ. ಸುದರ್ಶನ್, ಎಂ.ಕೃಷ್ಣಮೂರ್ತಿ ಅವರಿಗೆ ಧನ್ಯವಾದಗಳು ಎಂದು ಶಾಲಿನಿ ಹರೀಶ್ ಅವರು ತಿಳಿಸಿದರು.